ನಿರ್ಮಾಪಕರೇ ನಮ್ಮ ಅನ್ನದಾತರು. ಹಾಗಾಗಿ ಅವರ ಕೈಲೇ ಟ್ರೈಲರ್ ರಿಲೀಸ್ ಮಾಡಿಸಬೇಕೆಂದು ನಾನು ಹಾಗೂ ನಿರ್ದೇಶಕರು ಸೇರಿ ಪ್ಲಾನ್ ಮಾಡಿದೆವು. ಚಿತ್ರದಲ್ಲಿ ಹಾರರ್ ಇದೆ, ಸಸ್ಪೆನ್ಸ್ ಇದೆ, ಥ್ರಿಲ್ಲರ್ ಇದೆ, ಎಲ್ಲಕ್ಕಿಂತ ಹೆಚ್ಚಾಗಿ ತಾಯಿ ಹೃದಯದ ಮಮತೆಯಿದೆ, `ನೀನೊಂದು ಮುಗಿಯದ ಮೌನ` ದಂಥ ಎವರ್ ಗ್ರೀನ್ ಹಾಡನ್ನು ನನಗೆ ಕೊಟ್ಟವರು ಸಾಧು ಕೋಕಿಲ. ಅವರು ಮತ್ತೊಮ್ಮೆ ನನ್ನ ಚಿತ್ರಕ್ಕೆ ಅದ್ಭುತವಾದ ಮ್ಯೂಸಿಕ್ ಮಾಡಿಕೊಟ್ಟಿದ್ದಾರೆ. ಸಂಗೀತದ ನಂತರ ನಮ್ಮ ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಕ್ಯಾಮೆರಾ ವರ್ಕ್, ಉದಯಲೀಲಾ ಅವರು ಅದ್ಭುತವಾಗಿ ಛಾಯಾಗ್ರಹಣ ಮಾಡಿಕೊಟ್ಟಿದ್ದಾರೆ ಎಂದು ನಾಯಕ ನಟ ಆದಿತ್ಯ ಬಿಡುಗಡೆಗೆ ಸಿದ್ದವಾಗಿರುವ ಕಾಂಗರೂ ಚಿತ್ರದ ಕುರಿತಂತೆ ಹೇಳಿದರು.
ಬೆಂಗಳೂರಿನ ಹೈಡನ್ ಪಾರ್ಕ್ ಹೋಟೆಲಿನಲ್ಲಿ ನಡೆದ ಕಾಂಗರೂ ಚಿತ್ರದ ಥಿಯೇಟ್ರಿಕಲ್ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಹಿಂದೆ ಕಂಟೆಂಟ್ ಟ್ರೈಲರ್ನಲ್ಲಿ ಕಥೆಯ ಬಗ್ಗೆ ಹೇಳಿದ್ದೆವು. ಇದರಲ್ಲಿ ಚಿತ್ರದ ಒಟ್ಟಾರೆ ಆಶಯವನ್ನು ಹೇಳಿದ್ದೇವೆ, ಇನ್ವೆಸ್ಟಿಗೇಷನ್ ಆಫೀಸರ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. 4ಕ್ಕೆ ನನ್ನ ಹುಟ್ಟುಹಬ್ಬ, 3ರಂದೇ ನನ್ನ ಚಿತ್ರವೂ ರಿಲೀಸಾಗುತ್ತಿದೆ, ಹೆಚ್ಚಾಗಿ ಲೇಡೀಸ್ ನಮ್ಮ ಚಿತ್ರವನ್ನು ಇಷ್ಟಪಡುತ್ತಾರೆ ಎಂದರು,
ಟ್ರೈಲರ್ ರಿಲೀಸ್ ಮಾಡಿದ ನಂತರ ನಿರ್ಮಾಪಕ ರಮೇಶ್ ಬಂಡೆ ಮಾತನಾಡಿ ನಾವು ೬ ಜನ ಸ್ನೇಹಿತರು ಪೀಣ್ಯದಲ್ಲಿ ಇಂಡಸ್ಟಿ ನಡೆಸುತ್ತಿದ್ದೇವೆ, ಏನಾದರೂ ಹೊಸದನ್ನು ಮಾಡೋಣ ಅಂತ ಈ ಸಿನಿಮಾ ಮಾಡಿದ್ದೇವೆ, ಜನ ಕೊಟ್ಟ ದುಡ್ಡಿಗೆ ನ್ಯಾಯ ಒದಗಿಸುತ್ತೇವೆ ಎಂದು ಹೇಳಿದರು.
ನಂತರ ರವಿ ಕೀಲಾರ ಮಂಡ್ಯ ಮಾತನಾಡುತ್ತ ನಿರ್ದೇಶಕರು ಅನಿಮೇಶನ್ನಲ್ಲೇ ಚಿತ್ರವನ್ನು ನಮಗೆ ತೋರಿಸಿದ್ದರು, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಎಂದು ಹೇಳಿದರು. ನಂತರ ಸ್ವಾಮಿ ಚಕ್ರಭಾವಿ, ಕೆ.ಜಿ.ಆರ್. ಗೌಡ್ರು, ನರಸಿಂಹಮೂರ್ತಿ ಚಕ್ರಭಾವಿ ಚಿತ್ರದ ಕುರಿತು ಮಾತನಾಡಿದರು, ಮತ್ತೊಬ್ಬ ನಿರ್ಮಾಪಕ ಚನ್ನಕೇಶವ ಮಾತನಾಡುತ್ತ ಒಂದೊಳ್ಳೇ ಸಿನಿಮಾನ ಕನ್ನಡ ಜನರಿಗೆ ತೋರಿಸ್ತಿದ್ದೇವೆ, ಹಿಂದೆ ಮೋಷನ್ ಪೋಸ್ಟರನ್ನು ಶಿವಣ್ಣ ರಿಲೀಸ್ ಮಾಡಿಕೊಟ್ಟಿದ್ರು, ಇನ್ನು ಸಾಧು ಕೋಕಿಲ ಉತ್ತಮ ಮ್ಯೂಸಿಕ್ ಮಾಡಿದ್ದಾರೆ, ಜನ ಸಹಕರಿಸಿದರೆ, ಇನ್ನೂ ಹತ್ತಾರು ಸಿನಿಮಾ ಮಾಡುತ್ತೇವೆ ಎಂದರು.
ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ನಾಯಕನ ಪತ್ನಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ನಾನು ಆದಿತ್ಯ ಅವರ ಸಿನಿಮಾಗಳನ್ನು ನೋಡ್ತಾ ಬೆಳೆದವಳು, ಈ ಚಿತ್ರದಲ್ಲಿ ಅವರ ಜೊತೆಗೇ ಅಭಿನಯಿಸೋ ಅವಕಾಶ ಸಿಕ್ಕಿತ್ತು. ಒಬ್ಬ ಪ್ರೇಕ್ಷಕಳಾಗಿ ನಾನು ಸಿನಿಮಾನ ನೋಡಿದ್ದೇನೆ. ನಿರ್ದೇಶಕರು ಪ್ರತಿ ಪಾತ್ರವನ್ನು ಅಚ್ಚುಕಟ್ಟಾಗಿ ತಂದಿದ್ದಾರೆಂದು
ಹೇಳಿದರು.
ನಿರ್ದೇಶಕ ಕಿಶೋರ್ ಮೇಗಳಮನೆ ಮಾತನಾಡಿ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಕಥೆಗೆ ತಕ್ಕಂತೆ ಖರ್ಚಾಗಿದೆ. ೧೫೦ರಿಂದ ೨೦೦ ಥೇಟರ್ಗಳಲ್ಲಿ ರಿಲೀಸ್ ಮಾಡುತ್ತಿದ್ದೇವೆ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್ ಗಾಗೇ ಮಾಡಿದ ಕಥೆ, ಬೆಂಗಳೂರು, ಶೃಂಗೇರಿ, ಚಿಕ್ಕಮಗಳೂರು, ಕೊಪ್ಪ ಹಾಗೂ ಹೊರನಾಡು ಸುತ್ತಮುತ್ತ ಚಿತ್ರೀಕರಿಸಿದ್ದೇವೆ. ಯೂ ಟರ್ನ್ ಚಿತ್ರವನ್ನು ಇನ್ ಸ್ಪೈರ್ ಆಗಿ ತಗೊಂಡು ಈ ಚಿತ್ರ ಮಾಡಿದ್ದೇನೆ. ಒಂದು ಸಣ್ಣ ತಪ್ಪಿನಿಂದ ಮುಂದೆ ಏನೇನೆಲ್ಲ ಆಗಬಹುದೆಂದು ಚಿತ್ರದಲ್ಲಿ ತೋರಿಸಿಧ್ದೇವೆ ಎಂದು ಹೇಳಿದರು.
ಕಿಶೋರ್ ಮೇಗಳಮನೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಕಾಂಗರೂ ಚಿತ್ರ ಮೇ ೩ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಆರೋಹ ಪ್ರೊಡಕ್ಷನ್ಸ್ ಅಡಿ ಚನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲಾರ ಮಂಡ್ಯ ಹಾಗೂ ಕೆ.ಜಿ.ಆರ್.ಗೌಡ ಸೇರಿ ಈ ಚಿತ್ರವನ್ನು ನಿರ್ಮಿಸಿದ್ಧಾರೆ.
ಸಾಧು ಕೋಕಿಲ ಅವರ ಸಂಗೀತ ನಿರ್ದೇಶನ, ಕೆ.ಕಲ್ಯಾಣ್ ಅವರ ಸಾಹಿತ್ಯ, ಉದಯ್ ಲೀಲ ಅವರ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಅವರ ಸಂಕಲನ ಈ ಚಿತ್ರಕ್ಕಿದೆ. ಶಿವಮಣಿ, ಕರಿಸುಬ್ಬು, ಅರವಿಂದ್, ನಾಗೇಂದ್ರ ಅರಸ್, ಶಿವಮೊಗ್ಗ ರಾಮಣ್ಣ, ಪ್ರಜ್ವಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ.